BPL Ration Card
ಬಿಪಿಎಲ್ ಕಾರ್ಡ್(BPL Card) ಹೊಂದಿದವರಿಗೆ ರಾಜ್ಯ ಸರ್ಕಾರ(State Govt) ಬಿಗ್ ಶಾಕ್ ನೀಡಿದೆ. ಕಾರು(Car), ಸೈಟ್(site), ಮನೆ(house) ಇದ್ದು ಸರ್ಕಾರದ ಸೌಲಭ್ಯಕ್ಕೆ ಆಸೆ ಬಿದ್ದವರಿಗೆ ಆಹಾರ ಇಲಾಖೆ ಗುದ್ದು ನೀಡಿದ್ದು, ಸದ್ದಿಲ್ಲದೇ ಬಿಪಿಎಲ್ ಕಾರ್ಡ್ ಗೆ ಕತ್ತರಿ ಹಾಕಿದೆ.
ರಾಜ್ಯದಲ್ಲಿ ಅಂದಾಜು ಮೂರು ಲಕ್ಷ ಜನರ ಬಿಪಿಎಲ್ ಕಾರ್ಡ್ ( BPL Card ) ರದ್ದಾಗಿದೆ. ನೀವು ರೇಶನ್ ತಗೊಳ್ಳೋಕೆ ಹೋದರೇ ನಿಮ್ಮ ಕಾರ್ಡ್ ರದ್ದಾಗಿದೆ ಅನ್ನೋ ಮಾಹಿತಿ ಸಿಕ್ಕಿದರೂ ಅಚ್ಚರಿಯಿಲ್ಲ ಎಂಬ ಪರಿಸ್ಥಿತಿ ಬಿಪಿಎಲ್ ಕಾರ್ಡ್ ದಾರರದ್ದಾಗಿದೆ, ಯಾವುದಕ್ಕೂ ನೀವೊಮ್ಮೆ ನಿಮ್ಮ ಕಾರ್ಡ್ ರದ್ದಾಗಿಯೇ ? ಇಲ್ಲವೇ ಅನ್ನೋದನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ.
ಬಿಪಿಎಲ್ ಕಾರ್ಡ್ ದಾರರಿಗೆ ರಾಜ್ಯ ಆಹಾರ ಇಲಾಖೆ ಶಾಕ್ ನೀಡಿದೆ. ಸೈಲೆಂಟಾಗಿ ಬಿಪಿಎಲ್ ಪಡಿತರದಾರರ ಸಮೀಕ್ಷೆ ಮಾಡಿದ್ದ ಆಹಾರ ಇಲಾಖೆ ಮಾಹಿತಿ ಆಧರಿಸಿ ಉಳ್ಳವರ ಬಿಪಿಎಲ್ ಕಾರ್ಡ್ ಗೆ ಕೋಕ್ ನೀಡಿದೆ. ಮೂಲಗಳ ಮಾಹಿತಿ ಪ್ರಕಾರ ರಾಜ್ಯದಲ್ಲಿ ಇದುವರೆಗೆ ಬರೋಬ್ಬರಿ 3.41 ಲಕ್ಷ ಕಾರ್ಡ್ ಗಳನ್ನು ಆಹಾರ ಇಲಾಖೆ ರದ್ದುಗೊಳಿಸಿದೆ. ಬಿಪಿಎಲ್ ಕಾರ್ಡ್ ಅನರ್ಹರನ್ನು ಗುರುತಿಸಿದ ಆಹಾರ ಇಲಾಖೆ ಯಾವುದೇ ಮುನ್ಸೂಚನೆ ನೀಡದೆ ಕಾರ್ಡ್ ಡಿಲೀಟ್ ಮಾಡಿದೆ.
ಕಳೆದ ಆರು ತಿಂಗಳಿನಿಂದ ಅಹಾರ ಇಲಾಖೆ ಬಿಪಿಎಲ್ ಕಾರ್ಡ್ ಗಳ ತಿದ್ದುಪಡಿ ಆರಂಭಿಸಿತ್ತು. ಪ್ರತಿತಿಂಗಳು ಮಾಹಿತಿ ಆಧರಿಸಿ ಅನರ್ಹರ ಪಟ್ಟಿಯನ್ನು ತಯಾರಿಸುತ್ತ ಬರಲಾಗಿತ್ತು. ಈಗ ಒಟ್ಟು 3.41 ಲಕ್ಷ ಬಿಪಿಎಲ್ ಕಾರ್ಡ್ ಡಿಲಿಟ್ ಮಾಡಿ ಎಪಿಎಲ್ ವರ್ಗಾವಣೆ ಮಾಡಲಾಗಿದೆ. ಮೂರು ಲಕ್ಷಕ್ಕೂ ಅಧಿಕ ಜನರ ಬಿಪಿಎಲ್ ಕಾರ್ಡ್ ರದ್ದುಗೊಳಿಸಿರುವ ಆಹಾರ ಇಲಾಖೆ ಅದರಲ್ಲಿ ಕೆಲವರ ಪಡಿತರ ಚೀಟಿಯನ್ನು ಎಪಿಎಲ್ ಗೆ ಅಪಗ್ರೇಡ್ ಮಾಡಿದೆ.ಇನ್ನು ಹಲವರ ಹೆಸರನ್ನು ಎಪಿಎಲ್ಮತ್ತು ಬಿಪಿಎಲ್ ಎರಡೂ ಪಟ್ಟಿಯಿಂದ ಕೈಬಿಡಲು ತೀರ್ಮಾನಿಸಿದೆ.
ಗ್ಯಾರಂಟಿಗಳನ್ನು ಜಾರಿಗೆ ತಂದಿರೋ ರಾಜ್ಯ ಸರ್ಕಾರಕ್ಕೆ ಎರ್ರಾಬಿರ್ರಿ ಏರಿದ ಬಿಪಿಎಲ್ ಪಡಿತರದಾರರ ಸಂಖ್ಯೆ ತಲೆನೋವಾಗಿ ಪರಿಣಮಿಸಿತ್ತು. ಲಕ್ಷಾಂತರ ಅನರ್ಹರು ಬಿಪಿಎಲ್ ಕಾರ್ಡ್ ಪಡೆದುಕೊಂಡು ಸರ್ಕಾರಿ ಸೌಲಭ್ಯ ಪಡೆದುಕೊಳ್ಳುತ್ತಿದ್ದರು. ಹೀಗಾಗಿ ಅಂತಿಮವಾಗಿ ಬಿಪಿಎಲ್ ಕಾರ್ಡ್ ಡಿಲೀಟ್ ಮಾಡಿ ಎಪಿಎಲ್ ಕಾರ್ಡ್ ವರ್ಗಾವಣೆ ಮಾಡಿದೆ ಸರ್ಕಾರ. ಅದರಲ್ಲೂ ಇದರಲ್ಲಿ ಶೇ.25ರಷ್ಟು ಎಪಿಎಲ್ ಕಾರ್ಡ್ ನಲ್ಲೂ ಸೇರಿಸದೇ ಇರಲು ಚಿಂತನೆ ನಡೆದಿದೆ.
ಇಷ್ಟೇ ಅಲ್ಲದೇ ಅನಾರೋಗ್ಯ, ವಯೋಸಹಜ ಸಾವನ್ನಪ್ಪಿದವರ ಕಾರ್ಡ್ ಗಳನ್ನು ರದ್ದುಗೊಳಿಸಲಾಗಿದೆ. ಇಲ್ಲಿಯವರೆಗೆ 6.25 ಲಕ್ಷ ಮೃತರ ಹೆಸರಿನ ಕಾರ್ಡ್ ಗಳು ಚಲಾವಣೆಯಲ್ಲಿದ್ದವು. ಇವುಗಳನ್ನು ಆಹಾರ ಇಲಾಖೆ ರದ್ದು ಮಾಡಿದೆ. ಇದರಿಂದ ನೂತನವಾಗಿ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಸುವವರೆಗೆ ಅವಕಾಶವಾಗಲಿದ್ದು, ಇಲ್ಲಿಯವರೆಗೆ 2.95 ಲಕ್ಷ ಜನರು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ 1.27 ಕೋಟಿ ಬಿಪಿಎಲ್ ಕಾರ್ಡ್ ಗಳಿದ್ದು ಸದ್ಯ 4.36 ಕೋಟಿ ಜನರು ಫಲಾನುಭವಿಗಳಾಗಿದ್ದಾರೆ. ಇನ್ನು ಚುನಾವಣೆ ಮುಗಿಯುವುದನ್ನೇ ಕಾಯುತ್ತಿದ್ದ ಆಹಾರ ಇಲಾಖೆ ಸಿಎಂ ಸೂಚನೆ ಕಾಯುತ್ತಿತ್ತು. ಸಿಎಂ ಆಹಾರ ಇಲಾಖೆ ಬಡತನ ರೇಖೆಗಿಂತ ಮೇಲಿರುವ BPL ಕಾರ್ಡ್ ರದ್ದುಮಾಡುವಂತೆ ಸೂ ನೆ ನೀಡಿದ್ದು, ಸಿಎಂ ಸೂಚನೆ ಬೆನ್ನಲ್ಲೇ ಅಕ್ರಮ ಬಿಪಿಎಲ್ ಕಾರ್ಡ್ ಗೆ ಕತ್ತರಿ ಬಿದ್ದಿದೆ.
ಬಿಪಿಎಲ್ ಕಾರ್ಡ್ಗೆ ಯಾರು ಅನರ್ಹರು?
ಅನರ್ಹರನ್ನು ಹೇಗೆ ಪತ್ತೆ ಹಚ್ಚಲಾಗುತ್ತಿದೆ ಅನ್ನೋದನ್ನು ನೋಡೋದಾದರೇ, HRMS ನೌಕರರ ತಂತ್ರಾಂಶದ ಮೂಲಕ ಸರ್ಕಾರಿ ನೌಕರರು, IT ಇಲಾಖೆ ಮಾಹಿತಿ ಮೂಲಕ ಆದಾಯ ತೆರಿಗೆ ಪಾವತಿಸುವವರ ಮಾಹಿತಿ, ಆರ್ ಟಿ ಓ ಮೂಲಕಕಾರು, ಟ್ರಾಕ್ಟರ್, ಲಾರಿ ಹೊಂದಿದವರ ವಿವರ. ಕಂದಾಯ ಇಲಾಖೆಯ ಭೂಮಿ ತಂತ್ರಾಂಶದ ಮೂಲಕ 3 ಹೆಕ್ಟೆರ್ ಗೂ ಅಧಿಕ ಜಮೀನು ಹೊಂದಿದವರ ವಿವರ ಸಂಗ್ರಹಮಾಡಲಾಗಿದೆ. ಇನ್ನು ಕಂದಾಯ ಇಲಾಖೆಯ ನೊಂದಣಿ ಕಚೇರಿ ತಂತ್ರಾಂಶ ಪ್ರತಿ ವರುಷ 1.20 ಲಕ್ಷ ಆದಾಯ ವರಮಾನ ಇರುವವರು , ಸೈಟ್ ಹೊಂದಿದವರ ಮಾಹಿತಿ ಪಡೆದು ಆಹಾರ ಇಲಾಖೆ ಅನರ್ಹರ ಪಲಾನುಭವಿತ್ವಕ್ಕೆ ಕತ್ತರಿ ಹಾಕಿದೆ.